ಭಾನುವಾರ, ನವೆಂಬರ್ 9, 2014

ನಾನು ಸೌಜನ್ಯ



ನೀವು ಮರೆತಿರಬಹುದು ನನ್ನ. ಧರ್ಮಸ್ಥಳದ ಪಾಂಗಳ ಸಮೀಪ ಇರುವ ಪುಟ್ಟ ಮನೆಯಲ್ಲಿ, ಪೋಷಕರಾದ ಚಂದ್ರಪ್ಪ ಮತ್ತು ಕುಸುಮವತಿಯ ಜೊತೆ ವಾಸವಾಗಿದ್ದೆ. ಬಡವರಾಗಿದ್ದರೂ ಕಷ್ಟಪಟ್ಟು ತುಂಬಾ ಮುದ್ದಿನಿಂದ ಸಾಕಿದ್ದರು ನನ್ನ ತಂದೆ ತಾಯಿ.
ನನ್ನಮ್ಮ ಮನೆಕೆಲಸ ಮುಗಿಸಿ ಸುಸ್ತಾಗಿ ಕೂತಾಗ ಆಕೆಯ ಮಡಿಲಲ್ಲಿ ತಲೆಇಟ್ಟು ಮಲಗಿ "ಅಮ್ಮಾ, ನಾನು ಬೇಗ ದೊಡ್ಡವಳಾಗಿ ಕಲಿತು,ಚೆನ್ನಾಗಿ ಸಂಪಾದಿಸಿ ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ತ್ಹೇನೆ, ನಂತರ ನಿಮ್ಮಿಬ್ಬರ ಕೆಲಸಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತೆ,ನೆಮ್ಮದಿಯಿಂದ ಬದುಕುವ" ಎನ್ನುವ ಕನಸನ್ನು ತೋರಿಸಿದ್ದೆ.ನನ್ನ ಕನಸಿಗೆ ರೆಕ್ಕೆ ಕಟ್ಟಲು,ಉತ್ತಮ ಭವಿಷ್ಯ ರೂಪಿಸುವ ಹಂಬಲದೊಂದಿಗೆ ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜ್ ನ ಧ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದೆ.
ಅಕ್ಟೋಬರ್ 9, ಸಂಜೆ ನನ್ನ ತರಗತಿ ಮುಗಿಸಿ ಮನೆಯತ್ತ ಹೆಜ್ಜೆ ಇಡುತಿದ್ದೆ, 5 ರ ಸಮಯ, ಜಿನುಗುಟ್ಟುವ ಮಳೆಯಿಂದಾಗಿ ಬೇಗ ಮನೆಮುಟ್ಟುವ ಉದ್ದೇಶದಿಂದ ಸ್ವಲ್ಪ ಆತುರದಿಂದಲೇ ನಡೆಯುತ್ತಿದ್ದೆ. ಆದರೆ ಮನುಷ್ಯ ಜಾತಿಗೆ ಕಳಂಕವಾದ ಕೆಲ ದುಷ್ಟರು ತನ್ನ ನೀಚ ಕಾಮ ತೃಷೆಯನ್ನು ತೀರಿಸಲು ನನ್ನ ದೇಹವನ್ನು ಉಪಯೋಗಿಸಿದರು. ನನ್ನಲ್ಲಿದ್ದ ಅಲ್ಪ ಶಕ್ತಿಯಿಂದ ಉಸಿರಿರುವವರೆಗೂ ಹೊರಾಡಿದೆ,ನೋವಿನಿಂದ ಚೀರಾಡಿದೆ , ಕೈಮುಗಿದು ಬೇಡಿದೆ, ನನ್ನ ಧ್ವನಿ,ನನ್ನ ಕಣ್ಣೀರು,ನನ್ನ ನೋವು ಅವರ ಮನ ಕರಗಿಸಲಿಲ್ಲ, ನನ್ನ ಆತ್ಮ ನನ್ನ ದೇಹವನ್ನು ಬಿಟ್ಟು ಬಹುದೂರ ಬಂತು, ನನ್ನ ದೇಹ ಮಲಿನಗೊಂದು ಕಾಡಿನ ಪೊದೆಯಲ್ಲಿ ಬಿದ್ದಿತ್ತು.


ನನ್ನಮ್ಮಾ....... ನನ್ನಮ್ಮ ನನಗಾಗಿ ಕಾದು ,ಹೊತ್ತು ಮೀರಿ ಮನೆಗೆ ಬಾರದಾಗ ಊರವರ ಸಹಾಯದಿಂದ ಇಡೀ ರಾತ್ರಿ ಸುರಿಯುವ ಧಾರಾಕಾರ ಮಳೆಯ ನಡುವೆ ಹುಡುಕಾಡಿದರು. ಅಮ್ಮಾ ನಿನ್ನ ಕಣ್ಣೀರು ಆ ಮಳೆಯ ನೀರಿನಂತೆ ಹರಿಯುತಿತ್ತು, ಅಮ್ಮಾ..... ನಿನಗೆ ನಾ ಹೇಗೆ ತಿಳಿಸಲಿ... ನಿನ್ನ ಮಡಿಲಲ್ಲಿ ಇನ್ನೊಮ್ಮೆಮಲಗುವ, ನಿನ್ನ ಕೈ ತುತ್ತು ಉಣ್ಣುವ ಅವಕಾಶವಂಚಿತಳಾಗಿ, ಕನಸನ್ನು ನಡುನೀರಲ್ಲಿ ಬಿಟ್ಟು ಬಾರದ ಲೋಕಕ್ಕೆ ತಲುಪಿರುವೆನು .


ಮರುದಿನ ನನ್ನ ನಿರ್ಜೀವವಾದ ದೇಹವನ್ನು ನೋಡಿ, ಮರುಕ ಪಟ್ಟು ಊರು-ಪರವೂರಿನ ಸಾವಿರಾರು ಬಾಂಧವರು ನ್ಯಾಯಕ್ಕಾಗಿ ಹೋರಾಟ ಶುರುವಿಟ್ಟರು. ನಿರಂತರವಾದ ಪ್ರತಿಭಟನೆ,ಜಾಥ, ಸತ್ಯಾಗ್ರಹ, ಉಪವಾಸ,ಎಲ್ಲವೂ ನಡೆಯಿತು. ಎಲ್ಲೋ ನನ್ನ ಕೊಂದ ಪಾಪಿಗಳನ್ನು ಶಿಕ್ಷಿಸಿ ನನ್ನ ಆತ್ಮಕ್ಕೆ ಶಾಂತಿ ದೊರಕಿಸಬಹುದೆಂಬ ವಿಶ್ವಾಸ ಮೂಡಿತ್ತು.


ಆದರೆ ನನ್ನ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಪ್ರಭಾವಿಗಳ ಕೈವಾಡವಿರುವ ಕಾರಣ ನನಗೆ ನ್ಯಾಯ ಗಗನ ಕುಸುಮವಾಯಿತು. ನಮ್ಮ ಊರಿನವರಾದ, ಆಗಿನ ಮುಖ್ಯಮಂತ್ರಿ ಸದಾನಂದ ಗೌಡ,ನಂತರದ ಜಗದೀಶ್ ಶೆಟ್ಟರ್, ಹೊಸ ಮುಖ್ಯಮಂತ್ರಿ ಸಿದ್ದರಾಮಯ್ಯ,ಯಾರಿಗೂ ನನಗೆ ನ್ಯಾಯ ಕೊಡಿಸುವ ಆತುರವಿಲ್ಲ. ಸಿಬಿಐ ತನಿಖೆಯು ನೆನೆಗುದಿಗೆ ಬಿದ್ದಿದೆ.


ಯಾವ ತಪ್ಪು ಮಾಡದೆ ನಾ ಬಲಿಯಾದೆ . ನನ್ನ ತಾಯಿಯ ಕಣ್ಣೀರ ಚಿಂತೆ ಬಿಡಿ, ನಿಮ್ಮ ಲೋಕದಲ್ಲಿ ಬಡವರಿಗೆ ನ್ಯಾಯಸಿಗುವ ಭರವಸೆ ನನ್ನಲ್ಲಿ ಹೊರಟುಹೋಗಿದೆ. ನನ್ನಂತಹ ನೂರಾರು ಸಹೋದರಿಯರು ಕಳೆದ 2 ವರ್ಷದಲ್ಲಿ ವಿಕೃತರ ಕೈಯಿಂದ ನಲುಗಿ ನನ್ನ ಲೋಕ ಸೇರಿದ್ದಾರೆ. ನಮ್ಮೆಲ್ಲರ ತಾಯಂದಿರು ನಿರಂತರ ಕಣ್ಣೀರು ಸುರಿಸುತ್ತ ನೋವಿನಿಂದ ನರಳುತಿದ್ದಾರೆ . ಅವರ ಮುದ್ದಿನ ಕಂದಮ್ಮಗಳು ನಾವು,ನಮ್ಮೆಲ್ಲರ ಒಂದೇ ಒಂದು ಕೋರಿಕೆ ಇನ್ನು ಮುಂದಾದರೂ ಇಂತಹ ಕ್ರೌರ್ಯ ನಿಲ್ಲಲು ನೀವೆಲ್ಲ ಭಾರತೀಯರು ಜಾತಿ , ಮತ ಭೇದವಿಲ್ಲದೆ ರಾಜಕೀಯ ಬಿಟ್ಟು ಒಂದಾಗಿ, ಕಠಿಣವಾದ ಕಾನೂನು ಜಾರಿಗೊಳಿಸಿ.

[ i and i ]

#UNITED #WE #CAN


https://www.facebook.com/BlueWavesPage

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ