ಭಾನುವಾರ, ನವೆಂಬರ್ 9, 2014

ಅಜ್ಞಾತ ಸಂತಸ



ಗೆಳೆಯರೇ.. ಕೆಲವೊಂದು ವಿಷಯಗಳು ನಮ್ಮ ಕಣ್ಣೆದುರು ಇದ್ದರೂ ನಮ್ಮ ಗಮನಕ್ಕೆ ಬಾರದಿರುತ್ತದೆ. ಅಂತಹದೇ ಘಟನೆ ಇವತ್ತು ನಡೆಯಿತು.

ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಶಾಲಾ ರಜಾ ದಿನಗಳನ್ನು ಕಳೆಯಲು ಮುರ್ಡೆಶ್ವರಕ್ಕೆ ಹೋಗಿದ್ದೆ. ಸಾಯಂಕಾಲ ಅಲ್ಲಿ ತಲುಪಿದ ನಾವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಹೋಟೆಲ್ನಲ್ಲಿ ತಂಗಿದ್ದೆವು. ಮುಂಜಾನೆ ಹೊತ್ತು ಬಾಲ್ಕನಿಯಲ್ಲಿ ಬೆಳಗ್ಗಿನ ಚಹಾ ಸವಿಯುತ್ತಿರುವಾಗ ಹೋಟೆಲಿನ ಗೇಟಿನ ಬಳಿ ಒಬ್ಳು ಹಣ್ಣು ಹಣ್ಣು ಮುದುಕಿ ಹೋಟೆಲಿನ ಗೇಟಿನ ಕಾಂಕ್ರೀಟ್ ಹಜಾರವನ್ನು ಗುಡಿಸುತ್ತಿದ್ದಳು. ಗುಡಿಸಿ ಮುಗಿದ ಕೂಡಲೇ, ಮತ್ತೊಂದು ವಾಹನ ತನ್ನ ಚಕ್ರದಲ್ಲಿ ತುಂಬಿಕೊಂಡಿದ್ದ ಮಣ್ಣನ್ನು ರಾಚಿ ಹೋಯ್ತು. ಆ ಮುದುಕಿ ತನ್ನ ಎಂದಿನ ಶ್ರದ್ದೆಯಿಂದ ಮತ್ತೆ ಮತ್ತೆ ಗುಡಿಸಿ ಮುಗುವಷ್ಟರಲ್ಲಿ ಮತ್ತೊಂದು ಕಾರು.. ಹೀಗೆ ಹಲವು ಬಾರಿ ಪುನರಾವರ್ತನೆ ಆದಾಗ ನನ್ನ ಮನಸ್ಸು ಮುಮ್ಮಲ ಮರುಗಿತು, ಅಸಹಾಯಕತೆಗಳು ದುರ್ಬಲರನ್ನೇ ಹೀಯಾಳಿಸುತ್ತವೆ ನೋಡಿ.. ಬಾಲ್ಕನಿಯಿಂದ ಇಳಿದು ಹೋಗಿ ಆ ಮುದುಕಿಯ ಕೈಗೆ 500 ರುಪಾಯಿ ನೋಟನ್ನು ಇಟ್ಟೆ. ಮುದುಕಿ ಸ್ಥಬ್ದವಾಗಿ ನಿಂತಳು. ಕ್ಷಣಾರ್ಧದಲ್ಲಿ ಕಣ್ಣಿಂದ ಜಾರಿ ಬಿದ್ದ ಹನಿಯೊಂದು ಅವಳ ಸುಕ್ಕು ಗಲ್ಲವನ್ನು ತೇವಗೊಳಿಸಿತು. ಅವಳ ಕಣ್ಣ ಹನಿಗಳು ಹೇಳಿದ ಕಥೆಗಳನ್ನು ನನ್ನಕ್ಷರಗಳು ಕಟ್ಟಿಕೊಡಲು ಸೋಲುತ್ತವೆ ಬಿಡಿ.

ಅಲ್ಲಿಂದು ಮತ್ತೆ ಹೋಟೆಲಿಗೆ ಪ್ರವೇಶಿಸುವಾಗ ದ್ವಾರದಲ್ಲೇ ಇದ್ದ ಹೋಟೆಲಿನ ಉಪಾಹಾರ ಗೃಹಕ್ಕೆ ಇನ್ನೊಂದು ಸ್ಟ್ರಾಂಗ್ ಚಾ ಕುಡಿಯಲು ಹೋದೆ, ಅಲ್ಲೊಬ್ಬ ಮುದುಕ ಉಪಹಾರ ಮಾಡಿ ಹೋದವರ ಎಂಜಲು ಪಾತ್ರವನ್ನು ಎತ್ತುತ್ತಾ, ಟೇಬಲನ್ನು ಸ್ವಚಗೊಳಿಸುತ್ತಾ ಮೌನವಾಗಿ ತನ್ನ ಕೆಲಸದಲ್ಲಿ ತಲ್ಲೀನನಾಗಿದ್ದ. ತುಂಬಾ ಯಾಂತ್ರಿಕವಾಗಿದ್ದಂತಿದ್ದ ಅವನ ಕೆಲಸದ ನಡುವೆ ಲೋಕದ ಪರಿವೆಯೇ ಅವನಿಗಿಲ್ಲದಂತಿತ್ತು ಅವನ ಮುಖ ಭಾವ. ನನಗೆ ಅವನ ಮುಖದ ತೀವ್ರ ಮೌನ ಸಹಿಸಲಾಗಲಿಲ್ಲ. ಅವನ ಕೈಗೆ 500 ರುಪಾಯಿ ನೋಟು ಇಡುವಾಗ ನನಗೂ ಮಾತು ಹೊರಡಲಿಲ್ಲ, ಅವನಿಗೂ ಮಾತು ಹೊರಡಲಿಲ್ಲ. ಮತ್ತೊಂದು ಕೈಯಲ್ಲಿ ಎತ್ತಿದ್ದ ಎಂಜಲು ಪ್ಲೇಟನ್ನು ಅಲ್ಲೇ ಬಿಟ್ಟು ದರದರನೆ ವಾಶ್ ರೂಂ ಕಡೆಗೆ ಓಡಿಹೋದ. ಸ್ವಲ್ಪ ಸಮಯದಲ್ಲಿ ಹೊರ ಬಂದ ಅವನ ಕಣ್ಣುಗಳು ಕೆಂಪಾಗಿದ್ದವು. ಅತ್ತು ಮುಖ ತೊಳೆದು ಬಂದಿದ್ದಾನೆ ಅಂತ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. "ದೇವರಿದ್ದಾನೆ ಎಂಬುದು ಸುಳ್ಳಲ್ಲ, ನನ್ನ ಮಗನಿಗೆ ಮೈ ಹುಷಾರಿಲ್ಲ, ಆಸ್ಪತ್ರೆಗೆ ಹೋಗಲು ಹಣ ಇಲ್ಲದೆ ಅದೇ ಚಿಂತೆಯಲ್ಲಿದ್ದೆ, ಆ ದೇವರೇ ನಿಮ್ಮನ್ನು ಕಳುಹಿಸಿದ್ದು...." ಎನ್ನುತ್ತಿದ್ದವನ ಕಣ್ಣುಗಳು ಮತ್ತೂ ಹನಿಗೂಡಿದ್ದು ನನ್ನೆದೆ ನಡುಗಿಸಿತು. ಅವನ ಸ್ವರದಲ್ಲಿದ್ದ ಕಂಪನಗಳು ನನ್ನೊಳಗೂ ಹುಟ್ಟಿ ದುಃಖ ಮಿಡಿಯುತ್ತಿವೆ. ಸುಮ್ಮನೆ ಹೇಳುತ್ತಾರೆಯೇ, 'ದುಃಖವೆಂಬುದು ಸಾಮೂಹಿಕ ಸಮ್ಮೋಹಿನಿ' ಎಂದು.

ಅಲ್ಲಿಂದ ಭಾರವಾದ ಹೆಜ್ಜೆಗಳೊಂದಿಗೆ ರೂಮಿಗೆ ನಡೆದೆ. ನನ್ನ ರೂಮಿನ ಕಾರಿಡಾರನ್ನು ಸ್ವಚ್ಚಗೊಳಿಸುತ್ತಿದ್ದ 3 ಮಹಿಳೆಯರು ಎದುರಾದರು. ಅವರಿಗೂ ಏನಾದರು ಕೊಡುವ ಮನಸ್ಸಾಯಿತು. ಸಾವಿರ ರುಪಾಯಿ ನೋಟನ್ನು ಒಬ್ಬಳ ಕೈಗಿತ್ತು ನೀವು ಹಂಚಿಕೊಳ್ಳಿ ಎಂದು ಹೇಳಿ ನನ್ನ ರೂಮಿನೊಳ ಹೊಕ್ಕೆ.

ಹತ್ತು ನಿಮಿಷದ ನಂತರ ಏನೋ ಕೆಲಸದ ತರುವಾಯ ರೂಮಿಂದ ಹೊರಬಂದಾಗ ಬಾಗಿಲ ಬಳಿ ಆ ಮೂವರು ಮಹಿಳೆಯರು ಕಾಯುತ್ತಾ ನಿಂತಿದ್ದರು. ಏನಾಯ್ತು ಅಂತ ವಿಚಾರಿಸಿದಾಗ ಒಬ್ಬಳು ಮೆಲುದನಿಯಲ್ಲಿ ನಯವಾಗಿ ಹೇಳಿದಳು "ಸಾರ್ ನಾವು ಒಟ್ಟು ಹತ್ತು ಮಂದಿ ಇದ್ದೇವೆ, ಎಲ್ಲರಿಗೂ ಕೊಡಬೇಕಾ?". ನಾನು ಇನ್ನೊಂದು ಸಾವಿರವನ್ನು ಅವರ ಕೈಗಿಟ್ಟು ಎಲ್ಲರೂ ಹಂಚಿಕೊಳ್ಳಿ ಎಂದು ಹೇಳಿ ನನ್ನ ಕಾರಿನತ್ತ ಹೊರಟೆ.

ನನ್ನ ಕೆಲಸವನ್ನೆಲ್ಲಾ ಮುಗಿಸಿ ಮತ್ತೆ ಹೋಟೆಲಿಗೆ ಹಿಂದಿರುಗುವಾಗ ಆ ಮಹಿಳೆಯರ ಪೈಕಿ ಮಧ್ಯವಯಸ್ಸಿನ ಒಬ್ಬಳು ನಾನು ಬರುವುದನ್ನೇ ಕಾಯುತ್ತಾ ರೂಮಿನ ಪಕ್ಕ ನಿಂತಿದ್ದಳು.
ನನ್ನನ್ನು ಕಂಡದ್ದೇ ತಡ, ಓಡಿಬಂದು "ಸಾರ್ ನಿಮ್ಮಲ್ಲಿ ಸ್ವಲ್ಪ ಮಾತಾಡ್ಬೇಕು" ಅಂತ ಕಾರಿಡಾರಿನ ಮೂಲೆಗೆ ಕರೆದಳು. "ಹೇಳಿ ಅಕ್ಕಾ .... " ಅಂದೆ. "ಸಾರ್ ನಾನು ಬಹಳ ಕಷ್ಟದಲ್ಲಿದ್ದೇನೆ.. ನನಗೆ 6 ಮತ್ತು 8 ವರ್ಷದ ಇಬ್ರು ಮಕ್ಕಳಿದ್ದಾರೆ, ನನ್ನ ಗಂಡ ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ, ಅದಕ್ಕೆ ಇಲ್ಲಿ ರೂಂ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದೇನೆ.. ಏನಾದರೂ ಸಹಾಯ ಮಾಡಿ." ಅಂತ ಒಂದೇ ಉಸಿರಿಗೆ ಹೇಳಿ ಮೌನವಾದಳು. ಮತ್ತೆ ಒಂದು ಸಾವಿರವನ್ನು ಅವರ ಕೈಗಿಟ್ಟೆ., ಥಟ್ಟನೆ ಅವರು ನನ್ನ ಕಾಲಿಗೆ ಬಿದ್ದರು. ನಾನು ಹೌಹಾರಿ ಹಿಂದೆ ಸರಿದು ಹೇಳಿದೆ"... ಅಕ್ಕಾ ನಾನೋರ್ವ ಮುಸ್ಲಿಂ.. ಯಾರ ಕಾಲಿಗೂ ಬೀಳುವುದಿಲ್ಲ , ಯಾರನ್ನೂ ನನ್ನ ಕಾಲಿಗೆ ಬೀಳಲು ಬಿಡುವುದಿಲ್ಲ.. ಏನಾದ್ರೂ ಮಾಡಬೇಕೆಂದಿದ್ದರೆ ನನಗೆ ಆಶೀರ್ವಾದ ಮಾಡಿ.." ಆ ಹೆಂಗಸಿನ ಕಣ್ಣು ತುಂಬಿ ಬಂದಿತ್ತು. "ಇಲ್ಲಿ ಎಷ್ಟೋ ಜನ ಬರುತ್ತಾರೆ, ಹೋಗುತ್ತಾರೆ, ರೂಂ ಬಾಯ್ಸ್ ಮತ್ತು ವೈಟರ್ಸಿಗೆ ಟಿಪ್ಸ್ ಕೊಡುತ್ತಾರೆ, ನಮ್ಮಂತ ಕ್ಲೀನರ್ಸ್ಗೆ ಏನಾದರು ಕೊಟ್ಟದ್ದು ನೀವೇ ಮೊದಲು, ನಿಮಗೆ ದೇವರು ಒಳ್ಳೆಯದು ಮಾಡಲಿ" ಅಂತ ಕಣ್ಣೀರಿಟ್ಟಳು. ಅವರನ್ನು ಸಮಾಧಾನಪಡಿಸಿ ರೂಮಿಗೆ ತೆರಳಿದೆ.

ರೂಮಿಗೆ ಬಂದು ಹೆಂಡತಿ ಹತ್ರ ನಡೆದ ಘಟನೆಗಳನ್ನೆಲ್ಲಾ ವಿವರಿಸಿದೆ. "ಆ ಹೆಂಗಸಿನ ವಿಳಾಸ ಪಡೆಯಿರಿ, ನಾವು ಒಂದು ದಿನ ಹೋಗಿ ಬರೋಣ, ಸಾದ್ಯವಾದರೆ ಒಂದು ತಿಂಗಳ ದಿನಸಿಯನ್ನಾದರೂ ಅವರ ಮನೆಗೆ ತಲುಪಿಸೋಣ..." ಅವಳು ಮರುಕಪಟ್ಟು ಹೇಳಿದಳು.

ಈ ಘಟನೆಯನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದು ನಾನು ಮಾಡಿದ್ದು ಮಹಾ ಪುಣ್ಯ ಅಂತಲೋ, ನಾನು ಕೊಡುಗೈ ದಾನಿ ಅಂತ ತಿಳಿಸಲೋ ಖಂಡಿತಾ ಅಲ್ಲ ಗೆಳೆಯರೇ.. ನಾನ್ಯಾರೆಂದು ತಿಳಿಸುವ ಗೋಜಿಗೂ ನಾನು ಹೋಗುವುದಿಲ್ಲ. ಆದರೆ ನನ್ನ ಈ ಬರಹ, ಈ ಘಟನೆ ನಿಮ್ಮಲ್ಲೊಂದು ಸೂಕ್ಷ ಸಂವೇದನೆಯನ್ನು ಮೂಡಿಸಿದರೆ, ತಮ್ಮೊಳಗೊಂದು ಸ್ಪೂರ್ತಿಯ ಕಿಡಿಯನ್ನು ತುಂಬಿದರೆ ಈ ಬರಹ ಸಾರ್ಥಕ.

ನಾವು ಕುಟುಂಬ ಸಮೇತರಾಗಿ ದೂರದೂರಿಗೆ ತಿರುಗಾಡಲು ಹೋದಾಗ ನಮ್ಮವರ ಪ್ರತಿಯೊಂದು ಬೇಡಿಕೆಗಳನ್ನು ಪೂರೈಸುತ್ತೇವೆ. ಆರಾಮದಾಯಕ ಹೋಟೆಲ್ಗಳು, ಬಗೆ ಬಗೆಯ ದುಬಾರಿ ತಿನಿಸುಗಳು, ಮನರಂಜನಾ ಆಟಗಳು ಹೇಗೆ ಎಲ್ಲವನ್ನೂ... ನಮ್ಮ ಗ್ರೇಡನ್ನು ತೋರಿಸಲು ರೂಂ ಬೋಯ್ಸ್ಗೆ, ವೈಟರ್ಸ್ಗೆ ಟಿಪ್ಸ್ ಕೊಡುತ್ತೇವೆ.. ಆದರೆ ಇಂಥಹ ಕಸ ಗುಡಿಸುವವರನ್ನು, ಟೇಬಲ್ ಒರೆಸುವವರನ್ನೂ, ಹೌಸ್ ಕೀಪಿಂಗ್ ಕೆಲಸದವರನ್ನೂ ಕಂಡೂ ಕಾಣದಂತೆ ಮಾಡುತ್ತೇವೆ. ಒಪ್ಪತ್ತಿನ ಊಟಕ್ಕೆ, ಸಂಸಾರ ನಿರ್ವಹಣೆಗೆ ಕಷ್ಟಪಡುವ ಅವರನ್ನು ನಾವು ಗಮನಿಸುವುದೇ ಇಲ್ಲ. ಅವರ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ನಮ್ಮ ಐಶಾರಾಮಿ ಜೀವನದ ದಿನದ ಖರ್ಚಿನ ಒಂದಂಶ ಅವರಿಗೆ ಕೊಟ್ರೆ ಮರುಭೂಮಿಯಲ್ಲಿ ಒಂದು ಹನಿ ನೀರು ಸಿಕ್ಕಷ್ಟು ಸಂತಸಪಡುತ್ತಾರೆ.

ನಾವು ತಿಳಿದೂ ತಿಳಿಯದೆಯೂ ಅದೆಷ್ಟೋ ಹಣವನ್ನು ಪೋಲು ಮಾಡುತ್ತೇವೆ. ಅದರಲ್ಲಿ ಒಂದಂಶವನ್ನು ಇಂತಹವರಿಗೆ ನೀಡಿ ಅವರ ಕಷ್ಟದಲ್ಲಿ ಭಾಗಿಯಾದರೆ ನಮ್ಮ ಆ ದಿನ ಸಾರ್ಥಕ. ನಮ್ಮೊಳಗೇ ಅನೂಹ್ಯ ಸಂತಸಕ್ಕೆ ಅದು ಕಾರಣವಾಗುತ್ತದೆ. ಬನ್ನಿ ಗೆಳೆಯರೇ ಇಂಥಹ ಸಣ್ಣ ಪುಟ್ಟ ಬದಲಾವಣೆಯನ್ನು ನಮ್ಮ ಜೀವನದಲ್ಲಿ ತರೋಣ. ಮನುಷ್ಯ ಮನಸ್ಸು ಮನಸ್ಸುಗಳ ಸ್ನೇಹ ಸೇತುಗೆ ಅದು ಕಾರಣವಾಗಬಹುದು. ಕಷ್ಟದಲ್ಲಿರುವವನ ಮುಖದಲ್ಲಿ ಸಣ್ಣದೊಂದು ಸಂತಸದ ಮುಗುಳ್ನಗು ತರುವುದು ನಮ್ಮಿಂದ ಸಾಧ್ಯವಾದರೆ ಅದನ್ನು ಮೀರಿಸುವ ವಸ್ತು ಈ ಲೋಕದಲ್ಲಿ ಇರುವುದಾದರೂ ಏನು...?

ಏನಂತೀರಿ ಗೆಳೆಯರೇ...?

ಇತೀ ನಿಮ್ಮವನೇ,
ಅನಾಮಿಕ

www.facebook.com/BlueWavesPag


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ