ಮಂಗಳವಾರ, ಫೆಬ್ರವರಿ 10, 2015

***** ನನ್ನ ಧ್ವಜ *****


ಗೆಳೆಯರೇ..
.
ನಾವು ದಿನನಿತ್ಯ ನೋಡುತ್ತಿರುವ ಹಾಗೂ ಅದರ ಬಗ್ಗೆ ಗಮನ ಹರಿಸದ ಒಂದು ವಿಚಾರದತ್ತ ಬೆಳಕು ಚೆಲ್ಲಲು ಬಯಸುತ್ತಿದ್ದೇನೆ.
ನಮ್ಮಲ್ಲಿ ಹೆಚ್ಚಿನ ಜನರು ಯಾವುದಾದರೂ ಒಂದು ಧ್ವಜದ ಹಿಂಬಾಲಕರಾಗಿದ್ದಾರೆ. ಕೆಲವರು ಕೇಸರಿ ಧ್ವಜದ ಹಿಂದೆ ಇದ್ದರೆ, ಇನ್ನೂ ಕೆಲವರು ಹಸಿರು ಧ್ವಜದ ಹಿಂದೆ ಇರುವರು. ಇನ್ನು ಕೆಲವರು ನೀಲಿ ಬಿಳಿ, ಕೆಂಪು ಹೀಗೆ ಬಣ್ಣದ ಬಣ್ಣದ ಧ್ವಜಗಳ ಹಿಂದಿದ್ದಾರೆ. ನಿಜವಾಗಿಯೂ ಅವರವರ ಧ್ವಜಜಗಳ ಮೇಲೆ ಅವರಿಗೆ ಅಭಿಮಾನವಿದೆಯೇ....? ಅಥವಾ ತಮ್ಮ ಗುಂಪಿನ ಧ್ವಜ ಕಟ್ಟಿ ಅಹಂನಿಂದ ಬೀಗುವ ದರ್ಪವೇ...?

ನಮ್ಮಲ್ಲಿ ಅದರಲ್ಲಿ ವಿಷೇಶವಾಗಿ ಕರಾವಳಿ ಭಾಗದಲ್ಲಂತೂ ಧ್ವಜ ಹಾಗೂ ಪತಾಕೆಗಳದ್ದೇ ಕಾರುಬಾರು. ಯಾವುದಾದರೂ ಸಂಘಟನೆ ಯಾ ಸಂಸ್ಥೆಗಳ ಕಾರ್ಯಕ್ರಮವಿದ್ದರೆ ಧ್ವಜಗಳು, ಪತಾಕೆಗಳು ಆ ಕಾರ್ಯಕ್ರಮದ ಅವಿಭಾಜ್ಯ ವಸ್ತುವಾಗಿದೆ. ಪೇಟೆ, ಬೀದಿ, ಗಲ್ಲಿ, ಕೇರಿಗಳಲ್ಲಿ ದ್ವಜ,ಪತಾಕೆ, ಬ್ಯಾನರ್ ಹಾಕದಿದ್ದರೆ ಆ ಕಾರ್ಯಕ್ರಮ ಏನೊ ಕಡಿಮೆಯಾದಂತೆ ಭಾವಿಸುತ್ತಾರೆ. ಊಟಕ್ಕೆ ಉಪ್ಪು ಹಾಕದ ಹಾಗೆ ಸಪ್ಪೆ ಸಪ್ಪೆ ಎಂದು ಭಾವಿಸುಷ್ಟು ಮಟ್ಟಿಗೆ ಬೆಳೆದಿದೆ. ಈ ಮದ್ಯೆ ಯಾರಾದರೂ ಆ ಬ್ಯಾನರ್, ದ್ವಜಗಳಿಗೆ ಹಾನಿಯುಂಟು ಮಾಡಿದರಂತೂ ಕೇಳುವುದೇ ಬೇಡ. ಹಾನಿ ಮಾಡಿದವರನ್ನು ಹೊಡೆದು ಸಾಯಿಸುವಷ್ಟು ಅಂಧಾಭಿಮಾನ ಹೊಂದಿರುತ್ತಾರೆ. ಇವುಗಳಿಂದಾಗಿ ಎಷ್ಟೋ ಕೋಮು ಗಲಭೆಗಳು ಕೂಡ ಸಂಭವಿಸಿದೆ.
ನಿಜವಾಗಿಯೂ ಅವರವರ ಧ್ವಜಗಳ ಮೇಲೆ ಅವರವರಿಗೆ ಅಭಿಮಾನವಿದೆಯೇ...? 


ಏಕೆಂದರೆ... ಇಂತಹಾ ಧ್ವಜ, ಪತಾಕೆಗಳನ್ನು ಕಟ್ಟುವಾಗ ಇರುವಂತಹ ಅಭಿಮಾನ, ಹುಮ್ಮಸ್ಸು ಆಯಾ ಕಾರ್ಯಕ್ರಮ ಮುಗಿದ ನಂತರ ಎಲ್ಲಿ ಹೋಗುತ್ತೊ ತಿಳಿಯುತ್ತಿಲ್ಲ. ಅಂತಹಾ ಅಭಿಮಾನ ಧ್ವಜ ಪತಾಕೆಗಳು ಅಲ್ಲೆ ಹಲವು ದಿನಗಳವರೆಗೆ ಹಾರಾಡುತ್ತಾ, ದೂಳು ಮೆತ್ತಿಕೊಂಡು, ಯಾರ್ಯಾರ ಕಾಲಿನಡಿಗೆ ಬಿದ್ದು ಹರಿ ಹಂಚಿ ಹೋಗುವಾಗ ಯಾರ ಕಣ್ಣಿಗೂ ಕಾಣುವುದೇ ಇಲ್ಲ. ಮೊದಲಿನ ಅಭಿಮಾನ ಎಲ್ಲಿ ಸತ್ತು ಹೋಗುತ್ತೋ...? ಒಂದು ಬ್ಯಾನರ್ ಅಥವಾ ಧ್ವಜಕ್ಕಾಗಿ ಯಾರನ್ನೂ ಕೊಲೆ ಮಾಡಲು ಹಿಂಜರಿಯದ ಅಭಿಮಾನ ಕಾರ್ಯಕ್ರಮದ ನಂತರ ಟಾರ್ಚ್ ಹಿಡಿದು ಹುಡುಕಿದರೂ ಸಿಗಾಕಿಲ್ಲಾ... ಅಂತಹಾ ಅಭಿಮಾನ ಇದ್ದರೆಷ್ಟು, ಬಿಟ್ಟರೆಷ್ಟು...?

ಯಾವುದಾದರೂ ಗ್ರೂಪಿನ ಕಾರ್ಯಕ್ರಮದ ಬ್ಯಾನರ್ ಅಥವಾ ಧ್ವಜಕ್ಕೆ ಹಾನಿಯಾದರೆ ಅದೆಷ್ಟು ಪ್ರತಿಭಟನೆಗಳಾಗುತ್ತವೆ, ಪ್ರೆಸ್ ಕಾನ್ಫರೆನ್ಸ್ ಗಳಾಗುತ್ತವೆ. ಧಾಂದಲೆಗಳಗುತ್ತವೆ. ಊರಿಗೆ ಊರೇ ಹೊತ್ತಿ ಉರಿಯುವ ವಿಷಯಗಳು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೇ ಅಂತಹಾ ದ್ವಜ ಪತಾಕೆಗಳು ಮಣ್ಣು ಮೆತ್ತಿ ಹರಿ ಹಂಚಿ ಮೂರಾ ಬಟ್ಟೆಯಾದರೂ ಕೇಳುವವರಿಲ್ಲಾ. ಅವುಗಳನ್ನು ಮೂಕ ಪ್ರಾಣಿಗಳು ತಿಂದು ಆರೋಗ್ಯ ಕೆಡಿಸಿ ಕೊಳ್ಳುತ್ತವೆ. ಆದರೆ ನಾವುಗಳು ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳೋದೆ ಇಲ್ಲ. ಹರಿದು ಹೋದ ಧ್ವಜಗಳಿಂದ ನಮ್ಮ ಪೇಟೆ, ಪರಿಸರದ ಅಂದವೂ ಕೆಡುತ್ತದೆ. ಇಂತಹ ತೋರ್ಪಡಿಕೆಯ ಕಾರ್ಯಗಳ ಅಗತ್ಯವಿದೆಯೆ ?



ಇಂತಹಾ ಧ್ವಜದ ಹಿಂದೆ ಓಡುವುದರ ಬದಲು ನಮ್ಮ ಆತ್ಮ ಸಮ್ಮಾನವಾದ ತ್ರಿವರ್ಣ ಧ್ವಜವೊಂದನ್ನೇ ಎತ್ತಿ ಹಿಡಿಯುವ ಬಗ್ಗೆ ಯಾತಕ್ಕಗಿ ಚಿಂತಿಸುವುದಿಲ್ಲಾ??? ಕೇವಲ ಆಗಷ್ಟ್ 15 ರಂದು ಮಾತ್ರ ತ್ರಿವರ್ಣ ಧ್ವಜದ ನೆನಪಾಗುವುದೇ ?
ಎಲ್ಲಾ ಧ್ವಜಗಳನ್ನು ಬದಿಗೊತ್ತಿ, ಆ ಧ್ವಜ ಈ ಧ್ವಜವೆಂದು ಬಡಿದಾಡಿ ಕೊಳ್ಳುವ ಬದಲು ಕೇವಲ ತ್ರಿವರ್ಣ ಧ್ವಜವೊಂದನ್ನೆ ನಮ್ಮ ಹ್ರದಯದಲ್ಲಿ ಅಚ್ಚಿಳಿಸಲು ಸಾಧ್ಯವಿಲ್ಲವೆ?


ಅಂತಹಾ ದಿನಕ್ಕಾಗಿ ಹಾತೊರೆಯುತ್ತಿರುವ
ನಿಮ್ಮವನೇ ಆದ
ಮುಖ್ತಾರ್ ಉಚ್ಚಿಲ

ಬುಧವಾರ, ಡಿಸೆಂಬರ್ 31, 2014

ಬಹುಮಾನ ವಿತರಣಾ ಸಮಾರಂಭ

"ಲೇಖನಿಯ ಶಾಯಿಯ ನೀಲಿ ಅಲೆಗಳು "



ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್ ಫೇಸ್ಬುಕ್ ಬಳಗದ ಆಯೋಜಿಸಲ್ಪಟ್ಟ ಲೇಖನ ಸ್ಪರ್ಧೆಯಲ್ಲಿ 

ವಿಜೇತರಾದ ಯುವ ಬರಹಗಾರರಿಗೆ ಬಹುಮಾನ ವಿತರಣಾ ಸಮಾರಂಭ

ಸ್ಥಳ : ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್, ಉಡುಪಿ
ದಿನಾಂಕ : 11-01-2015


ನಮ್ಮೊಂದಿಗಿರುತ್ತಾರೆ :


ಪ್ರೊ। ಮುರಳೀಧರ ಉಪಾಧ್ಯ, ಹಿರಿಯಡ್ಕ , ಕನ್ನಡ ವಿಭಾಗದ ಮುಖ್ಯಸ್ಥರು, ಪಿ.ಪಿ.ಸಿ ಕಾಲೇಜು

ಯೋಗೇಶ್ ಮಾಸ್ಟರ್, ಸಾಹಿತಿ ಮತ್ತು ರಂಗಕರ್ಮಿ

ಡಾ।ಹಸೀನಾ ಖಾದ್ರಿ, ಇತಿಹಾಸ ಪ್ರಾಧ್ಯಾಪಕರು, ಕುವೆಂಪು ವಿಶ್ವವಿಧ್ಯಾನಿಲಯ, ಶಿವಮೊಗ್ಗ,

ಎ.ಕೆ ಕುಕ್ಕಿಲ, ಲೇಖಕರು, ಸಂಪಾದಕರು, ಸನ್ಮಾರ್ಗ ವಾರಪತ್ರಿಕೆ


ಬನ್ನಿ, ಭಾಗವಹಿಸಿ, ಪ್ರಜ್ಞಾವಂತ ಯುವ ಶಕ್ತಿಗಳ ನಿರ್ಮಾಣದ ಆಶಯವನ್ನು ಪ್ರೋತ್ಸಾಹಿಸಿ,


ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ,
ಟೀಮ್ ಬ್ಲೂ ವೇವ್ಸ್

ಶುಕ್ರವಾರ, ನವೆಂಬರ್ 28, 2014

ಚಿಂತಿಸಿ , ನಿರ್ಧರಿಸಿ



ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಿಂದಾಗಿ ಜನರಿಗೆ ಪರಸ್ಪರ ವೇಗವಾಗಿ ಸಂಪರ್ಕ ಬೆಳೆಸಿಕೊಳ್ಳಲು ಸಾದ್ಯ ವಾಗುತ್ತಿದೆ. ಈ ತಾಣಗಳಿಂದ ಎಷ್ಟು ಒಳಿತೋ ಅಷ್ಟೇ ಕೆಡುಕಿನ ಅಂಶಗಳೂ ಇವೆ.ಫೇಸ್ಬುಕ್, ವಾಟ್ಸ್ಅಫ್ ನಲ್ಲಿ ಅವ್ಯಾಹತವಾಗಿ ಹರಿದು ಬರುತ್ತಿರುವ ಸುಳ್ಳು ಸಂದೇಶಗಳಿಂದ ಯುವ ಜನತೆ ದಾರಿ ತಪ್ಪುತ್ತಿದೆ. ಇಂದಿನ ಯುವ ಜನಾಂಗ ಬಾಗಿದ ತಲೆಯಲ್ಲಿ ಕಣ್ಣು ಅತ್ತಿತ್ತ ಅಲುಗಾಡಿಸದೆ ಸದಾ ಫೇಸ್ಬುಕ್, ವಾಟ್ಸ್ ಅಪ್ಪ್ ಗಳ ಮೆಸೆಜ್ಗಳ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಕೈಯಲ್ಲೊಂದು ಮೊಬೈಲ್, ಕಿವಿಗಳಲ್ಲಿ ಹೆಡ್ ಫೋನ್ ತೂರಿಸಿಕೊಂಡು ಅದರೊಳಗೆ ತೂರಿಕೊಂಡರೆ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವೂ ಕೂಡ ಅವರಿಗೆ ಇರುವುದಿಲ್ಲ.


ಈಗೀಗ ಈ ತಾಣಗಳಲ್ಲಿ ಸುಳ್ಳುಗಳನ್ನು ವಿಜೃಂಭಿಸುತ್ತಿದೆ , ಮೂಡನಂಬಿಕೆ ಮಾರಾಟವಾಗುತ್ತಿದೆ. ಪರಸ್ಪರ ಅಪನಂಬಿಕೆ ಹರಡಲಾಗುತ್ತಿದೆ. ಮಾನವ ವಿರೋದಿ ನಿಲುವುಗಳನ್ನು ಪ್ರಚಾರ ಪಡಿಸಲಾಗುತ್ತಿದೆ , ಭಿನ್ನಾಭಿಪ್ರಾಯಗಳನ್ನು ತೇಜೋವಧೆಗಾಗಿ ಬಳಸಲಾಗುತ್ತಿದೆ ,ಅನಗತ್ಯ ಅಸಭ್ಯ ಮತ್ತು ಅಶ್ಲೀಲ ವೀಡಿಯೊ , ಚಿತ್ರ , ಬರಹಗಳನ್ನು ಅವ್ಯಾಹತವಾಗಿ ರವಾನಿಸಿ ವಿಕೃತ ಮಜ ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲ ಈಗ ತಾಣ ಅಪಾಯಕ್ಕೆ ಈಡಾಗುತ್ತಿದೆ. ಕ್ಷಣಮಾತ್ರದಲ್ಲಿ ಇಡೀ ಲೋಕವನ್ನು ಅಶಾಂತಿಯನ್ನು ಉಂಟು ಮಾಡಬಲ್ಲಂಥ ಮೆಸೇಜ್ ಗಳು ಅನಾಹುತಕ್ಕೆ ಎಡೆ ಮಾಡಿ ಕೊಡುತ್ತಿವೆ. ಇಂಥ ಸಂದೇಶಗಳ ಅಗತ್ಯವಿದೆಯೇ ? ಎಂದು ಆಲೋಚಿಸಬೇಕಾದ ಕಾಲ ಬಂದಿದೆ.



ಸಾಮಾಜಿಕ ತಾಣಗಳ ಬಲೆಗೆ ಬಿದ್ದವರೇ ಒಮ್ಮೆ ಯೋಚಿಸಿ .ನೀವು, ನಿಮ್ಮ ಹೆತ್ತವರು,ಸಂಭಂದಿಕರು,ನಿಮ್ಮ ಸಹೋದರ ಸಹೋದರಿಯರು ಸ್ನೇಹಿತ ಸ್ನೇಹಿತೆಯರು ಈ ಕೆಳಗಿನ ಸಂದರ್ಭಗಳಲ್ಲಿ ಇದ್ದಾಗ ಅವರ ಫೋಟೋ, ವೀಡಿಯೊಗಳನ್ನು ಶೇರ್ ಮಾಡಲು ತಯಾರಿದ್ದೀರಾ ?


೧.ಮರಣ ಸಂಭವಿಸಿದಾಗ
೨.ಅಪಘಾತ ಸಂಭವಿಸಿದಾಗ
೩.ನೀರಲ್ಲಿ ಮುಳುಗುತ್ತಿರುವಾಗ
೩.ರಸ್ತೆ ಅಥವಾ ಇನ್ನಿತರ ಯಾವುದೇ ದುರಂತಕ್ಕೆ ಬಲಿಯಾದಾಗ
೪.ಖಾಸಗಿ ಕ್ಷಣ ಗಳಲ್ಲಿ ಮೈಮರೆತಿರುವಾಗ
೫.ಗುಪ್ತವಾದ ಆತ್ಮೀಯ ಕ್ಷಣ ಹಂಚಿಕೊಂಡಾಗ
೬.ಯಾವುದೇ ಗಲಬೆಗೆ ಈಡಾದಾಗ
೭.ಬೆಂಕಿ ಅನಾಹುತ ಸಂಭವಿಸಿದಾಗ
೮ .ಅನೈತಿಕತೆಗೆ ಬಲಿಯಾದಾಗ
ಇಂಥ ಅನೇಕ ಸನ್ನಿವೇಶಗಳಿಗೆ ನೀವು ಬಲಿಯಾದಾಗ ನಿಮ್ಮ ಫೋಟೋ, ವೀಡಿಯೊ ಮಾಡಿ ಯಾರದ್ರೂ ಶೇರ್ ಮಾಡಿದರೆ ನೀವು ಒಪ್ಪಿಕೊಳ್ಳಲು ತಯಾರಿದ್ದೀರಾ ? ಇಲ್ಲ ಅನ್ನುವುದಾದರೆ ಇತರರ ಫೋಟೋ ,ವೀಡಿಯೊಗಳನ್ನು ಶೇರ್ ಮಾಡುವುದು ಸರಿಯೇ ಯೋಚಿಸಿ .ಸಿಕ್ಕಿ ಸಿಕ್ಕಿದ ಮೆಸೇಜ್ ಗಳನ್ನು ಹಿಂದೆ ಮುಂದೆ ನೋಡದೆ, ಓದದೆ ಮುಂದೆ ಕಳುಹಿಸುವವರು ನೂರು ಸಲ ಯೋಚಿಸಿ.ಅನಗತ್ಯ ಸಂದೇಶಗಳನ್ನು ಕಳುಹಿಸಿ ನಿಮ್ಮ ಡಾಟಾ ಪ್ಯಾಕೇಜ್ ಗೆ ಕೊಟ್ಟ ಹಣವನ್ನು ವ್ಯರ್ಥವಾಗಿಸುವುದರ ಜೊತೆಗೆ ಇನ್ನೊಬ್ಬರ ಜೇಬಿಗೆ ಮತ್ತು ಮನಸ್ಸಿಗೆ ಕತ್ತರಿ ಹಾಕುವ ಮೊದಲು ಯೋಚಿಸಿ .

ಹಣ ಕೊಟ್ಟು ನೆಟ್ ಹಾಕಿಸಿ ಇಂಟರ್ನೆಟ್ ಕಂಪನಿ ಗಳನ್ನು ಉದ್ದಾರ ಮಾಡುವ ಬದಲು ಅಗತ್ಯವಾದ ಸಂದೇಶಗಳನ್ನು ಮಾತ್ರ ಕಳುಹಿಸಿ ನಿಮ್ಮನ್ನು ನೀವೇ ಉದ್ದಾರ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ . ತನ್ಮೂಲಕ ತಮ್ಮ ಸಮುದಾಯ ,ಸಮಾಜ ದೇಶವನ್ನು ಉದ್ದಾರ ಮಾಡುವ ಬಗೆಯನ್ನು ಕಂಡುಕೊಳ್ಳಿ. ತಮ್ಮ ಮೊಬೈಲ್ ಗೆ ಯಾರೇ ವಾಟ್ಸ್ಯಾಪ್ ಸಂದೇಶ ಕಳುಹಿಸಿದರೆ, ತಾವು ಕಳುಹಿಸಿದ ಸಂದೇಶ ನಿಜವೇ ಎಂದು ತಿರುಗಿ ಕಳುಹಿಸಿದವನಲ್ಲಿ ಪ್ರೆಶ್ನಿಸುವಷ್ಟು ವ್ಯವಧಾನವೂ ಇಲ್ಲದೆ ಇನ್ನೊಬ್ಬರಿಗೆ ಕಳುಹಿಸುತ್ತೇವೆ. ಹಾಗೆ ತಿರುಗಿ ಪ್ರೆಶ್ನಿಸಿ ಕೊಂಚ ಮಟ್ಟಿಗಾದರೂ ಇಂತಹ ತಪ್ಪು ಸಂದೇಶಗಳಿಗೆ ಕಡಿವಾಣ ಹಾಕ ಬಹುದು. ಸುಳ್ಳು ವದಂತಿಗಳನ್ನು ಹಬ್ಬಿ ಬಿಡುವವರೇ, ಅದನ್ನು ಫಾರ್ವರ್ಡ್ ಮಾಡುವವರೇ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಈಗಲೇ ನಿರ್ಧಾರ ಮಾಡಿಕೊಳ್ಳಿ. . ನಾಳೆಯ ನೆಮ್ಮದಿಗಾಗಿ ಇಂದಿನ ದಿನದಿಂದ ಸತ್ ಸಮಾಜದ ನಿರ್ಮಾಣಕ್ಕಾಗಿ ಒಳ್ಳೆಯ ಮೆಸೇಜ್ ಮಾತ್ರ ಕಳುಹಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿ. ಇಂಥ ಪ್ರತಿಜ್ಞೆ ಈ ನಿಮಿಷದಲ್ಲಿ ,ಈಗಲೇ ಕೈಗೊಳ್ಳಿ.ಎಲ್ಲವೂ ಒಳ್ಳೆಯದಾಗುತ್ತದೆ
ಸತ್ ಸಮಾಜದ ನಿರ್ಮಾಣಕ್ಕಾಗಿ ಈ ಪ್ರತಿಜ್ಞೆ ಸ್ವೀಕರಿಸುವಿರಿ ಎಂಬ ಭರವಸೆಯೊಂದಿಗೆ

- ಟೀಂ ಬ್ಲೂ ವೇವ್ಸ್
www.Facebook.com/BlueWavesPage




                                                           ****** ಬ್ಲೂ ವೇವ್ಸ್ ಪತ್ರಿಕಾಗೋಷ್ಠಿ ******

ಎಲೆಮರೆಯ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್-ನ ಮೊದಲ ಹೆಜ್ಜೆ 'ನಿಕ್ಷೇಪ -2014' ಈ ಸಾಹಿತ್ಯ ಸ್ಪರ್ಧೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ದಿಸೆಯಲ್ಲಿ ಟೀಂ ಬ್ಲೂ ವೇವ್ಸ್ ಯಶಸ್ವಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತು.

-Team Blue Waves 

ಮದುವೆ

# ಮದುವೆ #

ಗೆಳೆಯರೇ,

ಮದುವೆ ಎಂಬುದು ಎರಡು ಜೀವಗಳ, ಎರಡು ಮನಸ್ಸುಗಳ ಸುಂದರ ಸಮಾಗಮವಾಗಿದೆ. ಸಾವಿರಾರು ಸುಂದರ ಕನಸುಗಳನ್ನು ಕಂಡು, ಸಾಕಾರ ಗೊಳಿಸಲು ಇಡುವ ಮೊದಲ ಹೆಜ್ಜೆಯಾಗಿದೆ. ಮದುವೆಯ ಆರಂಭಿಕ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ವಿಹರಿಸಿ ಕ್ರಮೇಣ ತಮ್ಮ ಜೀವನಕ್ಕೆ ಮರಳುವಾಗ ಬಹುತೇಕ ಸಂಸಾರಗಳಲ್ಲಿ ಕೆಲವೊಂದು ತಪ್ಪು ಗ್ರಹಿಕೆ ಗಳಿಂದಾಗಿ ಸಂಸಾರದ ನೌಕೆ ಅಲುಗಾಡಲು ಶುರುವಾಗುತ್ತದೆ.

ಹೊಸದಾಗಿ ಮನೆಗೆ ಬಂದ ಸೊಸೆ ನಮ್ಮ ಮಾತು ಕೇಳುತಿಲ್ಲ. ನಮ್ಮ ಸಂಸಾರಕ್ಕೆ ಹೊಂದಿಕೊಂಡು ನಡೆಯುತ್ತಿಲ್ಲ ಇತ್ಯಾದಿ, ಇತ್ಯಾದಿ. ತನ್ನವರನ್ನೆಲ್ಲ ಬಿಟ್ಟು ಹೊಸ ಪರಿಸರಕ್ಕೆ ಬಂದ ಸೊಸೆ ತನ್ನ ಬೇಸರ, ಖುಷಿಗಳನ್ನು ಗಂಡನ ಬಳಿ ಹೇಳಿಕೊಂಡರೆ, ಏಕಾಂತ ಬಯಸಿದರೆ ಅದಕ್ಕೆ ಸಿಟ್ಟೇಳುವ ಅತ್ತೆ . ಮಗನನ್ನು ತನ್ನ ಕೈಮುಷ್ಠಿಯಲ್ಲಿಟ್ಟುಕೊಂಡಿದ್ದಾಳೆ ಎಂಬ ಭಾವನೆ ಸೊಸೆಗೆ ಬಂದರೆ ಸಂಸಾರದಲ್ಲಿ ಒಡಕು ಮೂಡತೊಡಗುತ್ತದೆ .ಈ ರೀತಿಯ ಮನಸ್ಥಿತಿಯಿಂದ ಹೊರಬಂದರೆ ಮಾತ್ರ ಅತ್ತೆ ಸೊಸೆಯರ ನಡುವೆ ಸಾಮರಸ್ಯ ಏರ್ಪಡಬಹುದು.

ಇಂಥ ಸನ್ನಿವೇಶದಲ್ಲಿ ಗಂಡನಾದವನು ಅಸಾಹಾಯಕನಾಗುತ್ತಾನೆ. ಅತ್ತ ತಾಯಿಯತ್ತ ವಾಲುವಂತಿಲ್ಲಾ, ಇತ್ತ ಪತ್ನಿಯ ಮಾತು ಕೇಳುವಂತಿಲ್ಲ. ಮುತ್ತು ಕೊಡುವ ಮಡದಿ ಬಂದಾಗ ತುತ್ತು ಕೊಟ್ಟ ತಾಯಿಯನ್ನು ಮರೆಯಲಾಗದೆ, ಎದುರಿಸಲಾಗದೆ ಗಂಡನಾದವನು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗುತ್ತಾನೆ. ಅತ್ತೆ ಸೊಸೆಯರ ಒಳ ಜಗಳ ಬಹುತೇಕ ಸಂಸಾರಗಳಲ್ಲಿ ಕಾಣಬಹುದು. ಅಂತಹ ಸಂಧರ್ಭಗಳಲ್ಲಿ ಅತೀ ಹೆಚ್ಚಿನ ಜಾಗರೂಕತೆಯಿಂದ ಜಾಣ ಮೌನ ವಹಿಸುವುದು ಉತ್ತಮ. ಇಬ್ಬರ ಮಾತನ್ನೂ ಆಲಿಸಿ, ಗಣನೆಗೆ ತೆಗೆದು ಕೊಳ್ಳದೇ ಪರಿಸ್ಥಿತಿ ತಿಳಿಗೊಳಿಸಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಅವರವರ ಮೂಡ್ ನೋಡಿ ಪ್ರೀತಿಯಿಂದ, ಜಾಣ್ಮೆ ಯಿಂದ ಪರಸ್ಪರ ಹೊಂದಾಣಿಕೆ ಮಾಡಿ ಕೊಳ್ಳಲು ಅರ್ಥವಾಗುವಂತೆ ಹೇಳಬೇಕು.

ಇಲ್ಲಿ ಚಿಂತಿಸಬೇಕಾದ ವಿಷಯ - ಆ ಹೊಸ ಮದುಮಗಳು ತನ್ನ ಹುಟ್ಟಿನಿಂದ ಯೌವ್ವಾನಾವಸ್ಥೆಯ ತನಕ ಅವಳದೇ ಆದ ಜೀವನ ಶೈಲಿ ರೂಪಿಸಿಕೊಂಡು, ನಮಗೆ ವ್ಯತಿರಿಕ್ತವಾದ ವಾತಾವರಣ ದಲ್ಲಿ ಬೆಳೆದು ಬಂದವಳಾಗಿರುತ್ತಾಳೆ. ಅಂತಹಾ ಯುವತಿ ಮದುಮಗಳಾಗಿ ಬಂದ ಕೂಡಲೇ ತಮ್ಮ ಸಂಪ್ರದಾಯಕ್ಕೆ, ತಮ್ಮ ಕುಟುಂಬಾಚರಣೆಗೆ ಒಗ್ಗಿಕೊಳ್ಳ ಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಅವಳು ಮಾಡುವ ಮನೆಗೆಲಸಗಳಲ್ಲಿ ಹೆಚ್ಚು ಕಮ್ಮಿಯಾದರೂ,ಸರಿಯಾದ ಸಮಯ ಸಂಧರ್ಭ ನೋಡಿ ಪ್ರೀತಿಯಿಂದ ತಿಳಿ ಹೇಳುವುದು ಜಾಣತನವಾಗಿದೆ. ಅವಳು ಮಾಡುವ ಅಡುಗೆಯ ರುಚಿಯಲ್ಲಿ ಸ್ವಲ್ಪ ಏರು ಪೆರಾದಲ್ಲಿ, ಅದನ್ನು ಸಹಿಸಿಕೊಂಡು "ಅಡುಗೆ ಚೆನ್ನಾಗಿತ್ತು ಆದರೆ ಇನ್ನೂ ಕೂಡ ರುಚಿಯಾಗಿ ಮಾಡುವ ನೈಪುಣ್ಯತೆ ನಿನ್ನಲ್ಲಿದೆ" ಎಂದು ಹುರಿದುಂಬಿಸಬೆಕು. ಈಗಿನ ಕಾಲದಲ್ಲಿ ವೆಬ್ ಸೈಟ್ ಗಳಲ್ಲಿ, ಯೂ ಟ್ಯೂಬ್ ನಲ್ಲಿ ಬೇಕಾದಷ್ಟು ಅಡುಗೆಯ ವಿಧಾನಗಳು ಸುಲಭವಾಗಿ ಲಭ್ಯವಿದೆ. ಸಾಧ್ಯವಾದರೆ ಅಂತಹ ವಿಡಿಯೋಗಳನ್ನೂ, ಲೇಖನ ಗಳನ್ನೂ ತೋರಿಸಿ ಪ್ರೊತ್ಸಾಹಿಸಬೇಕು.

ಗಂಡು ಆದವನು, ಅವಳೂ ಕೂಡ ಒಂದು ಹೆಣ್ಣು ಜೀವ, ಅವಳಿಗೆ ಅವಳದೇ ಆದಂತಹ ಆಸೆ ಆಕಾಂಕ್ಷೆ ಗಳಿವೆ ಎಂಬುದನ್ನು ಅರ್ಥ ಮಾಡಿ ಕೊಂಡು, ತನ್ನ short temper ಅದುಮಿಟ್ಟುಕೊಂಡು ಚಾಕಚಕ್ಯತೆಯಿಂದ, ಎರಡೂ ಕಡೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ತಮಗೆ ಪೂರಕವಾದ ವಾತಾವರಣ ನಿರ್ಮಿಸಲು ಸಹಕಾರಿಯಾಗ ಬಲ್ಲುದು. ಮನೆಯಲ್ಲಿ ಅತ್ತೆ-ಸೊಸೆ ಜಗಳ ಸಾಮಾನ್ಯ ಬಿಡಿ ಅಂತ ಸುಮ್ಮನಿದ್ದು ಬಿಟ್ಟರೆ ಸಮಸ್ಯೆ ಬೆಂಕಿಗೆ ತುಪ್ಪ ಸುರಿದಂತೆ ಆಗುವ ಸಂಭವವಿದೆ . ತನ್ನ ತಾಯಿಯಿಂದ (ಅತ್ತೆ ) ಸೊಸೆಗಾಗುವ (ತನ್ನ ಹೆಂಡತಿಗೆ ) ಅಥವಾ ತನ್ನ ಹೆಂಡತಿಯಿಂದ ತನ್ನ ತಾಯಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಡನಾದವನು ಗಮನಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಉಂಟಾಗುವ ದಂಪತಿಗಳ ಜಗಳದಿಂದ ಮನೆ ರಣರಂಗ ವಾಗುವುದು ಇದೆ . ಆದ್ದರಿಂದ ಗಂಡನಾದವನು ತನ್ನ ಸಂಸಾರದಲ್ಲಿನ ಆಗು ಹೋಗುಗಳಿಗೆ ಕಿವಿಯಾಗಿ ಎಲ್ಲವನ್ನೂ ಸರಿದೂಗಿಸುತ್ತಾ, ಇಬ್ಬರೂ ಪರಸ್ಪರ ಸಹಕಾರದಿಂದ ಸಾಗುವ ಹಾಗೆ ಮಾಡಬೇಕು.

ಮದುವೆಯ ಹೊಸತರಲ್ಲಿ ಹೆಚ್ಚಿನವರೆಲ್ಲರಿಗೂ ಇಂತಹ ಸನ್ನಿವೇಶಗಳು ಅನುಭವ ಆಗಿಯೇ ಆಗುತ್ತದೆ. ನನಗೂ ಎದುರಾಗಿತ್ತು. ಸಾಧ್ಯವಾದಷ್ಟು ನಿಭಾಯಿಸಿದ್ದೆನೆ. ಹಾಗೂ ಕೆಲವು ಸಂದರ್ಭಗಳಲ್ಲಿ ಎಡವಿದ್ದೆನೆಯೂ ಕೂಡ. ಹೊಸದಾಗಿ ಮದುವೆಯಾದವರಿಗೂ ಹಾಗೂ ಇನ್ನು ಮದುವೆ ಆಗುವವರಿಗೆ ಈ ಕೆಲವು ಟಿಪ್ಸ್ ಗಳು ತಮ್ಮ ವೈವಾಹಿಕ ಜೀವನವನ್ನು ಸಾಧ್ಯವಾದಷ್ಟು ಸುಗಮ ವಾಗಿಸಲಿ ಎಂಬ ಸದುದ್ದೇಶ ನನ್ನದು.

ಇಂತಿ
ಅನಾಮಿಕ

ದ್ವೇಷವ ಬಿಟ್ಟು ಶಾಂತಿಯ ದೇಶವನ್ನು ಕಟ್ಟೋಣ.



ಪ್ರಪಂಚದ ಅತೀ ದೊಡ್ಡ ಜಾತ್ಯತೀತವಾದ ಪ್ರಜಾಪ್ರಭುತ್ವ ದೇಶವಾದಂತಹ ಭಾರತದಲ್ಲಿ ಅತ್ಯಾಚಾರ,ಕೋಮುವಾದ, ಭೀತಿವಾದ ಗಳು ಮೇಲೈಸಿ ಅಶಾಂತಿಗಳು ಉಂಟಾಗುತ್ತಿದೆ.

ಪರಸ್ಪರ ಸಹೋದರರಂತೆ ಅನ್ಯೋನ್ಯತೆಯಿಂದ ಜೀವಿಸಬೇಕಾದವರು ಧರ್ಮ ,ಧರ್ಮಗಳ ಹೆಸರೇಳಿಕೊಂಡು ಪರಸ್ಪರ ಬಡಿದಾಡಿಕೊಳ್ಳುವಂತಹ ಸನ್ನಿವೇಶಗಳಾಗಿವೆ ನಾವು ನೋಡುತ್ತಿರುವುದು.

ಒಂದು ಕಡೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಗಳು ಬೆಳೆದು ದೇಶದ ಸೌಹಾರ್ದತೆಗೆ ಮಾರಕವಾಗುತ್ತಿರುವಾಗ ಮತ್ತೊಂದು ಕಡೆಯಿಂದ ದೇಶದ ಉದ್ದಗಲಕ್ಕೂ ಸ್ತ್ರೀ ವರ್ಗವು ನಿರಂತರವಾಗಿ ಲೈಂಗಿಕ ದೌರ್ಜನ್ಯಗಳಿಗೆ ಒಳಪಡುತ್ತಲೇ ಇದ್ದಾರೆ..!!

ದೇಶದಲ್ಲಿ ನಡೆಯುತ್ತಿರುವಂತಹ ಎಲ್ಲಾ ಅನಾಚಾರ,ಅತ್ಯಾಚಾರ,ಅಕ್ರಮಗಳ ರೂವಾರಿಗಳನ್ನು ಧರ್ಮದ ಹೆಸರಿನಲ್ಲಿ ಗುರುತಿಸಿ ಅದಕ್ಕೆ ಮತೀಯ ಬಣ್ಣವನ್ನು ಲೇಪಿಸಿ ಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವಂತಹ ರಾಜಕೀಯ ಪಕ್ಷಗಳಿಗೇನು ಕೊರತೆಯಿಲ್ಲ.

ಸೌಹಾರ್ದಯುತ ಭಾರತವನ್ನು ಕಟ್ಟಲು ಯುವ ಸಮೂಹಕ್ಕೆ ಖಂಡಿತ ಸಾಧ್ಯವಿದೆ.ಪರಸ್ಪರ ಸಂಘಟನೆಗಳನ್ನು ಕಟ್ಟಿಕೊಂಡು ಅನ್ಯ ಧರ್ಮಗಳನ್ನು ನಿಂದಿಸಿ ದೇಶದ ಸೌಹಾರ್ದತೆಗೆ ಧಕ್ಕೆ ತರದೆ ಪರಸ್ಪರ ಸಹೋದರತೆಯಿಂದ, ಏಕತೆಯಿಂದ ಒಂದು ಗೂಡಿ ಬಾಳೋಣ.

ಧರ್ಮ ಧರ್ಮಗಳ ನಡುವಿನ ಅಪನಂಬಿಕೆಗಳನ್ನು ದೂರವಾಗಿಸಿ, ದ್ವೇಷವ ಬಿಟ್ಟು ಸೌಹಾರ್ದಯುತ ದೇಶವ ಕಟ್ಟುವವರು ನಾವುಗಳಾಗೋಣ..

ಸದಾಶಯದೊಂದಿಗೆ
ಟೀಂ ಬ್ಲೂ ವೇವ್ಸ್