ಶುಕ್ರವಾರ, ನವೆಂಬರ್ 28, 2014

ಮಾನವೀಯತೆಯಲ್ಲಿ ಬೆಳಗಲಿ ನಮ್ಮ ಭಾರತ

ಇಂದಿನ ಪ್ರಸಕ್ತ ಸನ್ನಿವೇಶಗಳಲ್ಲಿ ಪತ್ರಿಕೆಗಳಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ರಕ್ತದ ಕಲೆಗಳೇ ನಮಗೆ ಅಧಿಕವಾಗಿ ಕಾಣಸಿಗುತ್ತದೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿ ಮರೆಯಾಗುತ್ತಿರುವ ಮಾನವೀಯತೆ ಎಂದರೆ ತಪ್ಪಾಗಲಾರದು. ಜಾತಿ ವೈಷಮ್ಯಗಳು, ಗುಂಪುಗಾರಿಕೆ, ಕೊಲೆ, ಸುಳಿಗೆ, ಅತ್ಯಾಚಾರ, ಬಡಿದಾಟ, ಕೋಮುಗಲಭೆ ಹೀಗೆ ಮುಂತಾದ ಸಮಾಜ ಘಾತುಕ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿದೆ ನಮ್ಮ ಇಂದಿನ ಸಮಾಜದಲ್ಲಿ. ಅತೀ ಹೆಚ್ಚು ವಿಧ್ಯಾರ್ಹತೆಯನ್ನು ಹೊಂದಿದಂತಹ ಯುವಕರುಗಳು ಕೂಡಾ ಇಂತಹ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಇದು ನಮ್ಮ ದೇಶವನ್ನು ಆಂತರಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ದೇಶದ ಸಮಗ್ರ ಅಭಿವ್ರದ್ದಿಯ ಅಗತ್ಯತೆಯೆಡೆಗೆ ಗಮನ ಹರಿಸದಂತೆ ಮಾಡಿದೆ.

ಇಂದು ಮಾನವೀಯತೆಯು ನಶಿಸಿ, ರಾಕ್ಷಸೀ ಪ್ರವೃತ್ತಿ ಹೆಚ್ಚಿ ಒಂದರ ಮೇಲೊಂದರಂತೆ ತಲೆಗಳು ಉರುಳುತ್ತಾ ಬೀಳುತ್ತಿದ್ದರೂ ಅದರ ವಿರುದ್ಧ ಸೂಕ್ಷ್ಮ ಕ್ರಮ ಕೈಗೊಂಡು ನಿಯಂತ್ರಿಸಬೇಕಾಗಿದ್ದಂತಹ ಜವಾಬ್ದಾರಿಯನ್ನು ಹೊತ್ತ ಜನನಾಯಕರು ಅದ್ಯಾವುದರ ಪರಿವೇ ಇಲ್ಲದೆ ತಮ್ಮ ಜೇಬನ್ನು ತುಂಬಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಈ ಲಜ್ಜೆಗೆಟ್ಟ ರಾಜಕಾರಣಿಗಳು ಸಮಾಜದಲ್ಲಿ ಯಾವುದೇ ಒಂದು ಅಹಿತಕರ ಘಟನೆ ನಡೆದರೂ ಅದಕ್ಕೆ ಕೋಮು ಬಣ್ಣವನ್ನು ಲೇಪಿಸಿ ಪರಸ್ಪರ ಜನರ ಮದ್ಯೆ ವಿಷ ಬೀಜವನ್ನು ಬಿತ್ತಿ ದ್ವೇಷ ವೈಷಮ್ಯವನ್ನು ಬೆಳೆಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇವರ ಈ ಕಾರ್ಯ ಸಾಧನೆಗೆ ಇವರೊಂದಿಗೆ ಪಾಲುದಾರನಾಗಿ ನಿಲ್ಲುವುದು ಕೆಲವು ಪೂರ್ವಾಗ್ರಹ ಪೀಡಿತ ಮಾಧ್ಯಮಗಳಾಗಿವೆ. ಸಮಾಜದಲ್ಲಿ ನಡೆಯುತ್ತಿರುವ ದುಷ್ಕ್ರತ್ಯಗಳನ್ನು ಬೆಳಕಿಗೆ ತಂದು ಅದರಿಂದ ಜನರನ್ನು ರಕ್ಷಿಸಬೇಕಾದಂತಹ ಹೊಣೆಗಾರಿಕೆಯನ್ನು ಹೊತ್ತಂತಹ ಮಾಧ್ಯಮಗಳು ಇಂದು ಹಣಕ್ಕಾಗಿ ಮತ್ತು ಟಿ.ಆರ್.ಪಿ ಗಾಗಿ ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯವನಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಇದರ ಮೂಲಗಳನ್ನು ಕೆದಕಿದರೆ ಇದಕ್ಕೆಲ್ಲ ಮುಖ್ಯ ಕಾರಣ ನಾವುಗಳೇ ಎಂದು ಹೇಳಬಹುದು.

ಭಾರತದ ಸಂವಿಧಾನವು ನಮಗೆ ಕೊಟ್ಟಿರುವ ಮತದಾನದ ಹಕ್ಕನ್ನು ವ್ಯಕ್ತಿ ಮತ್ತು ಅವನ ಪೂರ್ವ ಪರಂಪರೆಯನ್ನು ನೋಡದೆ ಕೇವಲ ಪಕ್ಷ ಮತ್ತು ಜಾತಿಯ ಆಧಾರದಲ್ಲಿ ಮತ ಚಲಾವಣೆ ಮಾಡುವ ಮೂಲಕ ದುಷ್ಟ ರಾಜಕಾರಣಿಗಳ ಹುಟ್ಟಿಗೆ ಕಾರಣರಾಗುತ್ತೇವೆ. ಮುಂದೆ ಇದೇ ರಾಜಕಾರಣಿಗಳು ಬೆಳೆದು ಎಲ್ಲೊಂದರಲ್ಲಿ ನಡೆಯುವ ರಕ್ತ-ಸಿಕ್ತ ಅಧ್ಯಾಯಕ್ಕೆ ಕಾರಣೀಕೃತರಾಗುತ್ತಾರೆ. ಸಮಾಜದ ಉನ್ನತಿಗಾಗಿ ಶ್ರಮಿಸಬೇಕಾಗಿದ್ದಂತಹ ರಾಜಕಾರಣಿಗಳು ತಮ್ಮ ಸ್ವಾರ್ಥಕಾಗಿ ಸಮಾಜವನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಹೇಳಬಹುದು.

ಮತ್ತೊಂದು ಕಡೆ ಇನ್ನೂ ಕೂಡಾ ಪ್ರಾಪ್ತತೆಗೆ ಬರದಿರುವ ಮುಗ್ದ ಕಂದಮ್ಮಗಳನ್ನು ತಮ್ಮ ಕಾಮತೀಟೆ ತೀರಿಸಿಕೊಳ್ಳಲು ಸ್ವಂತ ತಂದೆಯರೇ ಉಪಯೋಗಿಸಿಕೊಳ್ಳುವಂತಹ ಹಲವು ಘಟನೆಗಳನ್ನು ನಾವು ಕಾಣಬಹುದಾಗಿದೆ, ಇವೆಲ್ಲವೂ ಮಾನವೀಯತೆ ನಶಿಸಿ ಹೋಗಿರುವುದರ ಕುರುಹುಗಳು ಎಂದು ಹೇಳಬಹುದು. ತಮಗೂ ಸಹ ಅಕ್ಕ ತಂಗಿ, ತಾಯಿಯಂದಿರಿದ್ದಾರೆಂಬ ಪರಿವೇ ಇಲ್ಲದೆ ಇನ್ನೊಂದು ಮನೆಯ ಹೆಣ್ಣು ಮಕ್ಕಳ ಮೇಲೆ ಕಾಮ ದ್ರಷ್ಟಿಯನ್ನು ಬೀರಿ ಅತ್ಯಾಚಾರವೆಸಗಿ ಅವರ ಬಾಳಿನ ನಂದಾ ದೀಪವನ್ನು ಆರಿಸಿ ಆನಂದ ಪಡೆಯುವ ವಿಕ್ರತ ಮನಸ್ಸಿನವರೇ ತುಂಬಿಹೋಗಿದ್ದಾರೆ ಈ ಕಲುಷಿತ ಸಮಾಜದಲ್ಲಿ.

ಒಂದು ಕಾಲದಲ್ಲಿ ಮಾನವೀಯತೆಗೆ ಹೆಸರು ವಾಸಿಯಾಗಿದ್ದ ಭಾರತ ದೇಶವು ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಳು ನಮ್ಮ ಪಾತ್ರವೂ ಸಹ ಮಹತ್ತರವಾದದ್ದು ಎಂಬ ಕಟು ಸತ್ಯವನ್ನು ಮರೆಯುವ ಹಾಗಿಲ್ಲ. ಬದಲಾಗ ಬೇಕಾಗಿದೆ ಗೆಳೆಯರೆ ನಾವು, ಬದಲಾಯಿಸಬೇಕಾಗಿದೆ ನಮ್ಮ ಭಾರತವನ್ನು. ಪ್ರತಿಯೊಂದು ರಾಷ್ಟ್ರವು ನಮ್ಮ ದೇಶದ ಅಭಿವ್ರದ್ಧಿಯನ್ನು ಕಂಡು ಅಸೂಯೆಪಡುವಂತಹ ದಿನಗಳಿಗಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ನಮ್ಮ ಸಂವಿದಾನವು ನಮಗೆ ಕೊಟ್ಟ ಹಕ್ಕನ್ನು ನಮ್ಮ ದೇಶದ ಅಭಿವ್ರದ್ಧಿಗಾಗಿ ಚಲಾಯಿಸುವುದರ ಮೂಲಕ ಬಲಿಷ್ಠ ಭಾರತವನ್ನು ಕಟ್ಟಬೇಕಾಗಿದೆ. ನಮ್ಮಗಳ ಮನಸ್ಸಿನ ಮೇಲೆ ಹೇರಲ್ಪಟ್ಟ ಕೋಮು ವೈಷಮ್ಯವನ್ನು ತೊಡೆದು ಹಾಕಿ ಸಹೋದರತೆಯ, ಸೌಹಾರ್ದಯುತ ಜಾತ್ಯತೀತ ಭಾರತವನ್ನು ಕಟ್ಟಬೇಕಾಗಿದೆ.

ಕೋಮುವಾದ ಅಳಿಯಲಿ
ಮಾನವೀಯತೆ ಉಳಿಯಲಿ
ಭಾರತೀಯತೆ ಬೆಳೆಯಲಿ
ಭಾರತ ಪ್ರಕಾಶಿಸಲಿ,
ಅನ್ಯ ದೇಶಗಳಿಗೆ ಬೆಳಕನನೀವ
ದೀವಿಗೆಯಾಗಲಿ... ನಮ್ಮ ದೇಶ
ಜೈಹಿಂದ್!


- ಟೀಂ ಬ್ಲೂ ವೇವ್ಸ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ